ಕುದ್ರು ಎನ್ನುವ ಪದವೇ ಬಹುತೇಕರಿಗೆ ಅರ್ಥವಾಗುವುದಿಲ್ಲ, ಕರಾವಳಿ ಜನರಿಗೆ ಅದು ಗೊತ್ತು. ಸಮುದ್ರದ ನೀರಿನಿಂದ ಸುತ್ತುವರೆದ ದ್ವೀಪವನ್ನು ಕುದ್ರು ಎನ್ನುತ್ತಾರೆ. ಇಂಥ ಒಂದು ಕುದ್ರುವಿನಲ್ಲಿ ನಡೆದ ಕಥೆಯನ್ನು " ಕುದ್ರು" ಚಿತ್ರವು ಹೇಳುತ್ತದೆ. ಇಲ್ಲಿ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲಾ ಧರ್ಮದ ಜನರೂ ಸಹೋದರರ ಹಾಗೆ ಒಬ್ಬರಿಗೊಬ್ಬರು ಹೊಂದಿಕೊಂಡು ಸಹಬಾಳ್ವೆ ನಡೆಸುವವರು. ಯಾರದೇ ಮನೆಯಲ್ಲಿ ಹಬ್ಬ ಇದ್ದರೂ ಉಳಿದವರೆಲ್ಲ ಅವರ ಮನೆಗೆ ಹೋಗಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ, ಇಂಥ ಊರಲ್ಲಿ ಒಂದೇ ಮನೆಯವರಂತಿದ್ದ ಎರಡು ಹಿಂದು, ಮುಸ್ಲಿಂ ಕುಟುಂಬಗಳ ನಡುವೆ ದ್ವೇಶದ ಜ್ವಾಲೆ ಹೊತ್ತಿ ಉರಿಯುತ್ತದೆ, ಅದಕ್ಕೆ ಕಾರಣ ಏನು, ಏಕೆ ಅಂಥಾ ಸಂದರ್ಭ ಬಂತು ಎಂದು ಹೇಳುವ ಪ್ರಯತ್ನವೇ ಕುದ್ರು. ಅದೇ ಭಾಗದ ಭಾಸ್ಕರ್ನಾಯಕ್ ಅವರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕುಟುಂಬದ ಕಥೆಯ ಜೊತೆಗೆ ಕರಾವಳಿಯ ಸೊಬಗನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ಸದಾನಂದ (ಹರ್ಷಿತ್ ಶೆಟ್ಟಿ), ಆರಿಫ್(ಫರ್ಹಾನ್), ರೇಶ್ಮಾ(ಡೈನ ಡಿಸೋಜ) ಅರುಣ್ (ಗಾಡ್ವಿನ್) ನಾಲ್ವರೂ ಕಾಲೇಜು ಸ್ನೇಹಿತರು. ಎಂಜಿನಿಯರಿಂಗ್ ಮುಗಿಸಿದ ನಂತರ ಸದಾನಂದ ಹಾಗೂ ಆರೀಫ್ ಇಬ್ಬರೂ ಸೌದಿಯಲ್ಲಿ ಆಯಿಲ್ರಿಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಇಬ್ಬರಿಗೂ ಭವ್ಯ(ಪ್ರಿಯಾ ಹೆಗ್ಡೆ) ಹಾಗೂ ನಾಝಿಯಾ ಜೊತೆ ಮದುವೆಯಾಗಿ ಮುದ್ದಾದ ಮಕ್ಕಳಿರುತ್ತಾರೆ, ಒಮ್ಮೆ ಸದಾನಂದ ಮತೀಯ ಭಾವನೆಗಳನ್ನು ಕೆರಳಿಸುವ ಸಂದೇಶವೊಂದನ್ನು ಗ್ರೂಪ್ನಲ್ಲಿ ಹಾಕುತ್ತಾನೆ. ಅದಕ್ಕೆ ಅರೀಫ್ ಬೇಸರಗೊಂಡು ನಾವೆಲ್ಲ ಅಣ್ಣತಮ್ಮಂದಿರಹಾಗೆ ಇದ್ದೇವೆ, ಇಂಥದ್ದರಲ್ಲಿ ಇದೆಲ್ಲ ಬೇಕಾ ಎಂದರೂ ಸದಾ ಕೇಳುವುದಿಲ್ಲ. ಮೆಸೇಜನ್ನು ತೆಗೆದುಹಾಕೆಂದು ಆರೀಫ್ ಹೇಳಿದರೂ ಸದಾ ಕೇಳಲ್ಲ, ಇದೇಕಾರಣಕ್ಕೆ ಜಗಳವಾಗುತ್ತದೆ. ನಂತರ ಆಯಿಲ್ ರಿಗ್ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅವಗಢ ನಡೆದು ಅರಿಫ್ ಮರಣಿಸುತ್ತಾನೆ, ಅದರ ಆರೋಪ ಸದಾ ಮೇಲೆ ಬರುತ್ತದೆ, ಸೌದಿ ಕಾನೂನಿನ ಪ್ರಕಾರ ೩೦ ದಿನದೊಳಗೆ ಸದಾನ ತಲೆ ಕಡಿಯುವಂತೆ ಆದೇಶಿಸಲಾಗುತ್ತದೆ. ಕೊಲೆಯಾದ ವ್ಯಕ್ತಿಯ ಪತ್ನಿ, 30 ದಿನದೊಳಗೆ ಕ್ಷಮಾದಾನಪತ್ರ ನೀಡಿದರೆ ಆತನಿಗೆ ಶಿಕ್ಷೆಯಾಗುವುದನ್ನು ತಡೆಯುವ ಅವಕಾಶವಿರುತ್ತದೆ. ಆದರೆ ಸದಾನಂದನೇ ಕೊಲೆ ಮಾಡಿದ್ದಾನೆಂದು ನಂಬಿದ್ದ ಅರೀಫ್ ಕುಟುಂಬ ಕ್ಷಮಾದಾನ ಪತ್ರ ನೀಡಲು ಒಪ್ಪುವುದಿಲ್ಲ, ಸದಾ ಪತ್ನಿ ಭವ್ಯ ಪರಿಪರಿಯಾಗಿ ಬೇಡಿಕೊಂಡರೂ ಅರಿಫ್ ಪತ್ನಿ ಹಾಗೂ ಆತನ ತಂದೆ ತಾಯಿ ಮಣಿಯುವುದಿಲ್ಲ,
ಅರುಣ್ ತಂದೆ (ಭಾಸ್ಕರನಾಯ್ಕ) ಒಬ್ಬ ನಿವೃತ್ತ ಸೇನಾಧಿಕಾರಿಯಾಗಿದ್ದು, ಆತ ನಾಝಿಯಾ ಬಳಿ ಮಾತನಾಡಿ ಒಪ್ಪಿಸುತ್ತಾನೆ. ಮುಂದೆ ಸದಾನಂದ ಆರೋಪದಿಂದ ಮುಕ್ತನಾಗಿ ಬಿಡುಗಡೆ ಹೊಂದುತ್ತಾನಾ, ಇಲ್ಲವಾ ಎನ್ನುವುದೇ ಚಿತ್ರದ ಪ್ರಮುಖ ಘಟ್ಟ.
ಚಿತ್ರದ ಮೊದಲಭಾಗದ ಕಥೆ ಮೂರು ಕುಟುಂಬಗಳ ನಡುವಿನ ಸಾಮರಸ್ಯ ಹಾಗೂ ಕಾಲೇಜು ಲೈಫ್ ಬಗ್ಗೆ ನಡೆದರೆ, ಆನಂತರ ರಿಗ್ ಪ್ರಕರಣ, ಜೊತೆಗೆ ದ್ವೇಶದ ಕಥೆಯಾಗಿ ಮಾರ್ಪಡುತ್ತದೆ, ಪ್ರತೀಕ್ ಕುಂದು ಅವರ ಸಂಗೀತದ ಹಾಡುಗಳು ಸುಂದರವಾಗಿದ್ದು, ಶ್ರೀಪುರಾಣಿಕ್ ಅವರ ಕ್ಯಾಮೆರಾ ಕೈಚಳಕದಲ್ಲಿ ಕರಾವಳಿಯ ಸೊಬಗು ಸೆರೆಯಾಗಿದೆ.